08/08/2026

ಬಿಲ್ಲವ ಸಮಾಜದ ಭರವಸೆಯ ಸೂರ್ಯ ಜನ್ಮದಿನದ ಸಲುವಾಗಿ ನುಡಿ ಬರಹ

0
IMG_6808

ಎರಡು ವರ್ಷಗಳ ಹಿಂದೆ ಜಯ ಸುವರ್ಣರ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅವರ ಮಗ ಸೂರ್ಯಕಾಂತ್ ಸುವರ್ಣರನ್ನು ಸಂದರ್ಶನ ಮಾಡಲು ಗೊರೆಗಾವ್‍ನಲ್ಲಿರುವ ಜಯ ಸುವರ್ಣರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಜಯ ಸುವರ್ಣರನ್ನೇ ಹೋಲುತ್ತಿದ್ದ ಸೂರ್ಯಕಾಂತ್ ಮಿತಭಾಷಿಯೆಂದು ತಿಳಿದಾಗ ನಾನು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತೋ ಇಲ್ಲವೋ ಎನ್ನುವ ಸಂದೇಹ ಮೂಡಿತ್ತು. ಗಂಭೀರವಾದ ಮುಖದಲ್ಲಿ ಸ್ಥಾಯಿಯಾಗಿರುವ  ಶಾಂತಭಾವ ಮತ್ತು ಪರಿಶುದ್ಧವಾದ ಮನಸ್ಸನ್ನು ಸಾಕ್ಷೀಕರಿಸುವ ಮೃದು ಮಂದಹಾಸದಿಂದಲೇ ಅಂದು ನನ್ನನ್ನು ಸ್ವಾಗತಿಸಿದರು. ನಾನು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಅವರು ನೀಡಿದ ಸ್ಫೂಟವಾದ ಉತ್ತರಗಳಿಂದಲೇ  ಅವರ ವ್ಯಕ್ತಿತ್ವದ ಅರಿವು ನನಗಾಗಿತ್ತು.

ಸಮಾಜ ಸೇವೆಯ ಕುರಿತು ಸೂರ್ಯಕಾಂತ್ ಅವರಲ್ಲಿ ಪ್ರಶ್ನಿಸಿದಾಗ, *“ನನ್ನ ಅಪ್ಪನ ಸಾಮಾಜಿಕ ಕಾರ್ಯಗಳನ್ನು ಬಹಳ ಹತ್ತಿರದಿಂದ ಕಂಡವನಿದ್ದೇನೆ. ಸಮಾಜ ಸೇವೆ ಮಾಡುವುದೆಂದರೆ ಅದೊಂದು ತಪಸ್ಸು. ಸಾಮಾಜಿಕ ವಿಷಯದಲ್ಲಿ ನಾನಿನ್ನೂ ಬಹಳಷ್ಟು ತಿಳಿಯಬೇಕಾಗಿದೆ. ಸಮಾಜದ ಜೊತೆಗೆ ಒಡನಾಟದಲ್ಲಿಟ್ಟುಕೊಂಡೇ ಜನಸೇವೆಯ ಅನುಭವವನ್ನು ಪಡೆಯಬೇಕು. ಅಪ್ಪ ಮಾಡಿದ ಸಮಾಜ ಸೇವೆಯ ಒಂದಿಷ್ಟಾದರೂ ಮಾಡಲು ಸಾಧ್ಯವಾದರೆ ನನ್ನ ಜೀವನ ಸಾರ್ಥಕ”* ಎಂದು ಪ್ರಬುದ್ಧತೆಯ ನುಡಿಗಳನ್ನಾಡಿದ್ದರು. ವ್ಯಕ್ತಿ ಹಣದಲ್ಲಿ ಶ್ರೀಮಂತನಾಗುವುದಕ್ಕಿಂತ ಗುಣದಲ್ಲಿ ಶ್ರೇಷ್ಠನಾಗಿರಬೇಕು. ಅಹಂಕಾರವನ್ನು ತೊರೆದು ಎಲ್ಲರ ಜೊತೆ ಬೆರೆಯುವ ಮನೋವೈಶಾಲ್ಯತೆಯಿರಬೇಕು. ಇಂಥ ಮೇರು ಮಟ್ಟದ ವ್ಯಕ್ತಿತ್ವ ಸೂರ್ಯಕಾಂತ್ ಅವರದ್ದು. ಸುಮಾರು ಹತ್ತು ವರ್ಷಗಳ ಕಾಲ ಭಾರತ್ ಬ್ಯಾಂಕಿನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಇದೀಗ ಕಾರ್ಯಾಧ್ಯಕ್ಷರಾಗಿ ಬಹುದೊಡ್ಡ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದಾರೆ.  ಇವರು ಕಾರ್ಯಾಧ್ಯಕ್ಷರಾದ ಮೇಲೆ  ಭಾರತ್ ಬ್ಯಾಂಕ್ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 2011ರಿಂದ 2019ರವರೆಗೆ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಯುವ ಅಭ್ಯುದಯ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ಇವರು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷರೂ ಆಗಿದ್ದಾರೆ. ಜೊತೆಗೆ ಹಲವಾರು ಧಾರ್ಮಿಕ ಸಂಸ್ಥೆಗಳ ಸಮಿತಿಯಲ್ಲಿದ್ದು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಜಯ ಸುವರ್ಣರಲ್ಲಿದ್ದ ನಾಯಕತ್ವದ ಗುಣ ಸೂರ್ಯಕಾಂತ್ ಅವರೊಳಗೂ ಪಡಿಮೂಡಿದೆಯೆಂದು ಅವರ ಕಾರ್ಯಚಟುವಟಿಕೆಗಳಿಂದ ತಿಳಿದುಬರುತ್ತದೆ.

ಜಯ ಸುವರ್ಣರ ನಂತರ ಸಮಾಜಸೇವೆ ಮಾಡುವ ದೀಕ್ಷೆಯನ್ನು ಸೂರ್ಯಕಾಂತ್ ಕೈಗೊಂಡರು. ಕೆಲವೊಂದು ಸಂದರ್ಭದಲ್ಲಿ ಇಲ್ಲ ಸಲ್ಲದ ಅಪವಾದಗಳು ಅವರನ್ನು ಮುತ್ತಿಕೊಂಡವು. ಆದರೆ ಅದ್ಯಾವುದಕ್ಕೂ ಅವರು ವಿಚಲಿತರಾಗಲಿಲ್ಲ. “ಯಾರೇನೇ ಹೇಳಲಿ, ಏನೇ ಮಾಡಲಿ. ನಾರಾಯಣ ಗುರುಗಳು ಎಲ್ಲವನ್ನೂ ಗಮನಿಸುತ್ತಾರೆ. ಅವರೇ ನಮ್ಮನ್ನು ರಕ್ಷಿಸುತ್ತಾರೆ. ಅವರಿಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ.”ಎನ್ನುತ್ತ ತಮಗೆ ಬಂದ ಅಪವಾದಗಳಿಗೆ ಮರುಗದೆ ಸಹನೆಯಿಂದ ಹಿತೈಷಿಗಳಿಗೆ ಸಾಂತ್ವನ ನೀಡುವ  ಅವರು ಬಲು ಎತ್ತರದ ಸ್ಥಾನದಲ್ಲಿ ಕಂಡುಬರುತ್ತಾರೆ. “ನಮ್ಮ ನಡೆ ಸತ್ಯದ ಹಾದಿಯಲ್ಲಿರಬೇಕು. ಆ ಹಾದಿಯಲ್ಲಿ ನಡೆಯುವುದು ಸ್ವಲ್ಪ ಕಷ್ಟವೇ. ಆದರೆ ಗೆಲ್ಲುವುದು ಸತ್ಯವೇ.”ಎನ್ನುವ ಧ್ಯೇಯ ವಾಕ್ಯವನ್ನು ಅಕ್ಷರಶಃ ಪಾಲಿಸಿಕೊಂಡು ಮುನ್ನಡೆಯುತ್ತಿರುವ ಸೂರ್ಯಕಾಂತ್ ಬಿಲ್ಲವ ಸಮಾಜದ ಶ್ರೇಷ್ಠ ನಾಯಕನಾಗಿ ಬೆಳೆಯಬಲ್ಲರು ಎನ್ನುವ ಭರವಸೆ ಗಟ್ಟಿಯಾಗುತ್ತದೆ.

‘ಸೂರ್ಯಕಾಂತ್ ತುಂಬಾ ಕಡಿಮೆ ಮಾತನಾಡ್ತಾರೆ. ನಮ್ಮ ಮಾತಿಗೆ ಪ್ರತಿಕ್ರಿಯಿಸುವುದೇ ಇಲ್ಲ’ ಎಂದು ಕೆಲವರ ಆರೋಪವಿದೆ. ಹೌದು ಸೂರ್ಯಕಾಂತ್ ಯಾರನ್ನೂ ಮಾತಿನಲ್ಲಿ ರಮಿಸುವುದಿಲ್ಲ. ಅವರ ಮಾತೆಂದರೆ ಪುಟಕ್ಕಿಟ್ಟ ಚಿನ್ನದಂತೆ. ಆಡುವ ಮಾತು ಹೇಗಿರಬೇಕು ಎಂಬುದನ್ನು ಸರಿಯಾಗಿ ಅರಿತವರು. ನಮ್ಮ ಮಾತು ಅನ್ಯರ ನೋವಾಗದೆ, ಸೋತವರನ್ನು ಅರಳಿಸುವ ಹೂವಾಗಬೇಕು ಎಂಬ ನಿಲುವನ್ನು ಹೊಂದಿರುವ ಇವರು ತಮ್ಮ ಬಳಿ ಬಂದವರೆಲ್ಲರ ಮಾತನ್ನು ತಾಳ್ಮೆಯಿಂದ ಆಲಿಸುತ್ತಾರೆ. “ಮುಂದೆ ಪಶ್ಚಾತಾಪ ಪಡುವಂತಹ ಯಾವುದೇ ತಪ್ಪುಗಳು ನಮ್ಮಿಂದ ಆಗಬಾರದು”ಎನ್ನುವ ಇವರು ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.

ಸೂರ್ಯಕಾಂತ್ ಅವರೇ ನೀವು ಇನ್ನಷ್ಟು ಸಮಾಜದ ಏಳಿಗೆಗಾಗಿ ಶ್ರಮಿಸುತ್ತ ಜನ ಮೆಚ್ಚುವ ನಾಯಕನಾಗಿ ಬೆಳೆಯಿರಿ. ನೂರು ಕಾಲ ಸುಖವಾಗಿ ಬಾಳಿರಿ’ ಎಂಬ ಮನಪೂರ್ವಕ ಹಾರೈಕೆಗಳೊಂದಿಗೆ ನಿಮಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು.

✍🏻 ಅನಿತಾ ಪೂಜಾರಿ ತಾಕೊಡೆ


Leave a Reply

Your email address will not be published. Required fields are marked *

You may have missed