08/08/2026

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕು: ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮನವಿ

0

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ರವರನ್ನು ಮೂಲ್ಕಿ- ಮೂಡುಬಿದಿರೆ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ, ಪುತ್ತೂರು ಶಾಸಕರಾದ ಸಂಜೀವ ಮಟಂದೂರು, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಶಾಂತಾರಾಮ‌ ಸಿದ್ದಿ ಉಪಸ್ಥಿತರಿದ್ದರು.

ನಮ್ಮ ದೇಶದಲ್ಲಿನ ಬಹುತೇಕ ರಾಜ್ಯಗಳಲ್ಲಿ ತಮ್ಮ ತಮ್ಮ ರಾಜ್ಯದಲ್ಲಿನ ಉತ್ತಮ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾಷೆಗಳನ್ನು ರಾಜ್ಯದ ಅದಿಕೃತ ಭಾಷೆಯನ್ನಾಗಿ ಸಂವಿಧಾನದ ಆರ್ಟಿಕಲ್ 345- ಬಿ ಪ್ರಕಾರ ಘೋಷಿಸಿಕೊಂಡಿದೆ. ಕಳೆದ 2011ನೇ ಜನಗಣತಿ ಪ್ರಕಾರ ಸುಮಾರು18.05 ಲಕ್ಷ ಜನರು ಅದೀಕೃತವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ.

ಕರ್ನಾಟಕ ತುಳು ಆಕಾಡೆಮಿ ಹಾಗೂ ತುಳು ಸಂಘ ಸಂಸ್ಥೆಗಳ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಸರಿ ಸುಮಾರು 40 ಲಕ್ಷಕ್ಕೂ ಅಧಿಕ ತುಳು ಭಾಷಿಕರಿದ್ದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಒಂದುವರೆ ಕೋಟಿಗಿಂತಲೂ ಅದಿಕ ತುಳು ಭಾಷಿಕರಿರುವುದನ್ನು ಗುರುತಿಸಲಾಗಿರುತ್ತದೆ.

ತಮ್ಮ ಅವಗಾಹಣೆಗಾಗಿ ಸಲ್ಲಿಸಿರುವ ಮಾಹಿತಿಗಳನ್ನು ಅವಲೋಕಿಸಿ ಸಕಾಲದಲ್ಲಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಸಂವಿಧಾನದ ಆರ್ಟಿಕಲ್ 345 ರ ಪ್ರಕಾರ ಘೋಷಿಸಲು ರಾಜ್ಯ ಸರ್ಕಾರವು ಅನುಸರಿಸಬೇಕಾದ ಮತ್ತು ಈಗಾಗಲೇ ಈ ಕುರಿತಾಗಿ ಕೈಗೊಂಡ ಕ್ರಮಗಳೊಂದಿಗೆ ಸಾಂವಿಧಾನಿಕ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದವರು‌ ಅನುಮೋದನೆಯನ್ನು ನೀಡುವಂತೆ ಆಗ್ರಹಿಸುವುದರ ಮೂಲಕ ತುಳುನಾಡಿನ ಸಮಸ್ತರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಬೇಕೆಂದು ಕರಾವಳಿ ಜಿಲ್ಲೆಯ ಶಾಸಕರುಗಳೆಲ್ಲರೂ ತಮ್ಮಲ್ಲಿ ವಿಜ್ಞಾಪಿಸಿಕೊಳ್ಳುತ್ತೇವೆ.

ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತಾದ ಸಾಂವಿಧಾನಿಕ ಕಾನೂನುಗಳ ಪ್ರಕಾರ ಪ್ರಾಸ್ಥಾವನೆಯನ್ನು ಮಂಡಿಸಿ ಅನುಮೋದನೆಯನ್ನು ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮತ್ತು ಅಲ್ಲಿಂದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಅತ್ಯಗತ್ಯವಾಗಿ ಕೈಗೊಳ್ಳಬೇಕಾಗಿ ಸಿಎಂ ಯಡಿಯೂರಪ್ಪ ನವರಲ್ಲಿ ವಿನಂತಿಸಿಕೊಳ್ಳಲಾಗಿದೆ


Leave a Reply

Your email address will not be published. Required fields are marked *

You may have missed