ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ
Screenshot
ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು ಭಾಗವಹಿಸಿದ್ದರು ಈ ವೇಳೆ ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಮಹಾವೀರ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತರಾಗಿದ್ದರು ಎನ್ನಲಾಗಿದೆ.
ರವಿ ಕಲ್ಕಾರ್ ರವರು ಹಲವಾರು ವರ್ಷ ವಿದೇಶದಲ್ಲಿ ದುಡಿದು ಬಳಿಕ ಶಾಂತಿಗೋಡು ಕಲ್ಕಾರ್ ಎಂಬಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಮೃತ ರವಿ ಕಲ್ಕಾರ್ ರವರು ಪುತ್ತೂರು ತಾಲೂಕು ಬಿಲ್ಲವ ಸಂಘದ ವಿದ್ಯಾನಿಧಿ ಸಂಚಾಲಕರಾಗಿ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಯುವವಾಹಿನಿ ಪುತ್ತೂರು ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ, ಕೂಡುರಸ್ತೆ ಮುಂಡೋಡಿ ನವಶಕ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಸದಸ್ಯರಾಗಿ ಹೀಗೆ ಹಲವು ಸಂಘಟನೆಗಳಲ್ಲಿ ಸೇವೆಗೈಯ್ಯುವ ಮೂಲಕ ಗುರುತಿಸಿಕೊಂಡಿದ್ದರು.
ಮೃತರು ಕೆಪಿಟಿಸಿಎಲ್(ಕೆಇಬಿ) ಇದರಲ್ಲಿ ಕಿರಿಯ ಅಭಿಯಂತರರಾದ ಪವಿತ್ರ, ಪುತ್ರಿ ರನ್ನಿ, ಪುತ್ರ ರವೀಶ್, ಸಹೋದರ ದಿನೇಶ್ ಕಲ್ಕಾರ್, ಸಹೋದರಿಯರನ್ನು ಅಗಲಿದ್ದಾರೆ.
